ಸ್ಯಾಂಡಲ್ವುಡ್ನಲ್ಲಿ ಬಹುತಾರಾಗಣದ ಸಿನಿಮಾಗಳು ಬರುವುದೇ ಅಪರೂಪ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುವುದೂ ಇದೆ. ಈಗ ಈ ಸಾಹಸಕ್ಕೆ ಕೈ ಹಾಕಿದ್ದಾರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರ ನಿರ್ದೇಶನದ ಚಿತ್ರದಲ್ಲಿ ದೂದ್ಪೇಡಾ ದಿಗಂತ್, ಪ್ರಜ್ವಲ್ ದೇವರಾಜ್, ಲೂಸ್ ಮಾದ ಯೋಗೇಶ್ ಜತೆಯಾಗುತ್ತಿದ್ದಾರೆ!
ರಿಯಲ್ ಸ್ಟಾರ್ ಉಪೇಂದ್ರರನ್ನು ಚೊಚ್ಚಲ ನಿರ್ದೇಶನಕ್ಕಾಗಿ ಸರ್ದಾರಿಯಾ ಆರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಸದ್ಯಕ್ಕಿದು ಚಾಲ್ತಿಗೆ ಬರುತ್ತಿಲ್ಲ. ಹಾಗೆಂದು ಪ್ರೊಜೆಕ್ಟ್ ಬಿದ್ದು ಹೋಗಿಲ್ಲ. ಸದ್ಯಕ್ಕೆ ಉಪ್ಪಿ ಬ್ಯುಸಿ ಇರುವ ಕಾರಣ, ಮಲ್ಟಿ ಸ್ಟಾರ್ ಚಿತ್ರ ತೆರೆ ಕಂಡ ನಂತರ ಸರ್ದಾರಿಯಾ ರಿಯಲ್ ಸ್ಟಾರ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈಗ ಅವರು ರಿಸ್ಕ್ ಬೇಡವೆಂದು ಮಲ್ಟಿ ಸ್ಟಾರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಅಡ್ವೆಂಚರಸ್ ಕಥೆ ಕೇಳಿರುವ ಕೆ. ಮಂಜು ಖುಷಿಯಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ದಿಗಂತ್, ಪ್ರಜ್ವಲ್, ಯೋಗೇಶ್ರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ. ನಾಯಕಿಯರು ಸೇರಿದಂತೆ ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕು. ಸಂಗೀತ ವಿ. ಹರಿಕೃಷ್ಣರದ್ದು ಅನ್ನೋದು ಮಾತ್ರ ಖಚಿತವಾಗಿದೆ.
ಇದೆಲ್ಲ ಸರಿ, ಸರ್ದಾರಿಯಾ ಚಿತ್ರ ಸ್ವಮೇಕೇ? ಹೌದೆನ್ನುತ್ತಾರೆ ಜನಪ್ರಿಯ ನೃತ್ಯ ನಿರ್ದೇಶಕರು. ಕಳೆದ ಕೆಲವು ವರ್ಷಗಳಿಂದ ನಿರ್ದೇಶನಕ್ಕೆ ತಯಾರಿ ಆರಂಭಿಸಿದ್ದ ಸರ್ದಾರಿಯಾ, ಶೂಟಿಂಗ್ಗೆಂದು ವಿದೇಶಗಳಿಗೆ ಹೋಗುವಾಗ ವಿಮಾನದಲ್ಲೇ ಇಂತಹ ಯೋಚನೆಗಳಿಗೆ ಒಂದು ರೂಪ ಕೊಡುತ್ತಿದ್ದರಂತೆ. ಅಲ್ಲೇ ಹುಟ್ಟಿಕೊಂಡಿದ್ದ ಕಥಾ ವಸ್ತುವಿಗೆ ಈಗ ಅಂತಿಮ ರೂಪ ಸಿಗುತ್ತಿದೆ. ಕಥೆ ರೆಡಿಯಾಗುತ್ತಿದೆ, ಸಂಭಾಷಣೆಯತ್ತಲೂ ಗಮನ ಕೊಡುತ್ತಿದ್ದಾರೆ.
ನನ್ನ ನಿರ್ದೇಶನದ ಮೊದಲ ಚಿತ್ರದಲ್ಲಿ ರೊಮ್ಯಾಂಟಿಕ್ ಇಮೇಜ್ ಹೊಂದಿರುವ ದಿಗಂತ್ ಇರುತ್ತಾರೆ. ಯೋಗಿಯಂತೂ ಮಾಸ್ ಹೀರೋ. ಪ್ರಜ್ವಲ್ ಈಗಾಗಲೇ ಗುರುತಿಸಿಕೊಂಡಿರುವ ನಾಯಕ. ಈ ಮೂವರೂ ನನ್ನ ಗೆಳೆಯರು. ಅವರನ್ನೀಗ ನನ್ನ ಸಿನಿಮಾದಲ್ಲಿ ಒಂದಾಗಿಸುತ್ತಿದ್ದೇನೆ. ಸಾಕಷ್ಟು ಭರವಸೆಗಳನ್ನು, ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎನ್ನುವ ಸರ್ದಾರಿಯಾ, ನೃತ್ಯ ನಿರ್ದೇಶನವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಹರ್ಷ, ಪ್ರಭುದೇವ, ಫರಾ ಖಾನ್, ಅಹ್ಮದ್ ಖಾನ್, ಗಣೇಶ್ ಆಚಾರ್ಯ ಸಾಲಿಗೆ ಇಮ್ರಾನ್ ಸರ್ದಾರಿಯಾ ಕೂಡ ಸೇರುತ್ತಿದ್ದಾರೆ.